ಶ್ರೀ ತೇರು ಮಲ್ಲೇಶ್ವರಸ್ವಾಮಿ ದೇವಾಲಯ
ಹಿರಿಯೂರಿನ ಪಾಳೆಯರಾರನಾಗಿದ್ದ ಕೆಂಚಪ್ಪನಾಯಕ ಎಂಂಬುವವನು ಕ್ರಿ.ಶ.1446ರಲ್ಲಿ ಈ ದೇವಾಲಯವನ್ನು ಕಟ್ಟಿಸಿದ ಎನ್ನಲಾಗಿದೆ. ದ್ರಾವಿಡ ಶೈಲಿಯಲ್ಲಿರುವ ಇದು ಅತ್ಯಂತ ಮನೋಹರವಾಗಿದೆ. ಮಹಾದ್ವಾರದ ಪೂರ್ವಕ್ಕಿರುವ 45 ಎತ್ತರದ ದೊಡ್ಡ ಗೋಪುರವನ್ನು ನೋಡಿದಾಗ ಹಂಪೆಯ ವಿರೂಪಾಕ್ಷ ದೇವಾಲಯ ನೆನಪಾಗುವುದು ಸಹಜ. ಗೋಪುರದ ಒಳಗಡೆ ಜಗುಲಿಗಳಿದ್ದು, ಮಹಾದ್ವಾರದಲ್ಲಿ ಖಡ್ಗ ಹಿರಿದಿರುವ ಎರಡು ವಿಗ್ರಹಗಳಿವೆ.
ಮುಖಮಂಟಪದ ಸುತ್ತಲೂ ಪೌಳಿ ಗೋಡೆಯಿದ್ದು, ಮೂರು ಕಡೆ ಪ್ರವೇಶದ್ವಾರಗಳಿವೆ. ಮಂಟಪದ ಮೇಲೆ ಮತ್ತು ಹೊರಭಾಗದ ಕಿರುಮಂಟಪಗಳಲ್ಲಿನ ವಿಗ್ರಹಗಳು ಹಾಳಾಗಿವೆ. ಒಳಭಾಗದಲ್ಲಿ ಶಿವಪುರಾಣ, ಗಿರಿಜಾ ಕಲ್ಯಾಣ, ಕಿರಾತಾರ್ಜುನ ಮುಂತಾದ ಚಿತ್ರಗಳನ್ನು ಬಣ್ಣದಿಂದ ಬಿಡಿಸಿದ್ದಾರೆ. ಮುಖಮಂಟಪದ ಎದುರಿನಲ್ಲಿ 45 ಅಡಿ ಎತ್ತರದ ದೀಪಸ್ತಮಬದಲ್ಲಿ ಪ್ರತಿ ದಿಕ್ಕಿನಲ್ಲಿ ಎಂಟೆಂಟು ಹಣತೆಯಿದ್ದು, ಪ್ರತಿ ಹಣತೆಯೂ 10 ಸೇರು ಹಿಡಿಯುವಷ್ಟು ದೊಡ್ಡವಾಗಿದೆ. ಈ ದೊಡ್ಡ ದೀಪಗಳನ್ನು ವರ್ಷದಲ್ಲಿ ಒಮ್ಮೆ ಮಾತ್ರ ಹಚ್ಚುತ್ತಾರೆ. ಗೋಪುರದ ಎದುರಿಗೆ 40-45 ಅಡಿ ಎತ್ತರದ ಸುಂದರವಾದ ಉಯ್ಯಾಲೆ ಕಂಬವಿದೆ. ಹತ್ತಿರದಲ್ಲೆ ನಾಗರಕಟ್ಟೆ ಇದ್ದು, ಆಗಿನ ಕಾಲದ ಕಬ್ಬಿಣದ ಸರಪಳಿಗಳನ್ನು ನೋಡಬಹುದು.
ಇಲ್ಲಿಯ ದೇವರನ್ನು ಮಲ್ಲೆಶ, ಮಲ್ಲೇಶ್ವರ, ಮಲ್ಲಿನಾಥ, ಮಲ್ಲಯ್ಯ, ಹೆರುಗಳಿಂದಲೂ ಕರೆಯುತ್ತಾರೆ. ಮಾಘಮಾಸದಲ್ಲಿ ಒಂದು ವಾರಗಳ ಕಾಲ ನಡೆಯುವ ತೇರುಮಲ್ಲೇಶ್ವರನ ಜಾತ್ರೆಗೆ ಅಪಾರ ಜನ ಸೇರುತ್ತಾರೆ. ಈ ದೇವಸ್ಥಾನ ಮಹಾದ್ವಾರವು ಪೂರ್ವಕ್ಕಿದ್ದು, ಮಲ್ಲೇಶ್ವರನ ವಿಗ್ರಹವು ದಕ್ಷಿಣಕ್ಕೆ ಇರುವುದರಿಂದ ಹಿರಿಯೂರು ಕ್ಷೇತ್ರವನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ.
|