LEGENDS OF CHITRADURGA
ದಿನಾಂಕ:

ಅನ್ನದಾತ ಕಾಶಿ ಅಪ್ಪಣ್ಣಶೆಟ್ಟರು

 

 ಕ್ರಿ.ಶ. 1876 ಮತ್ತು 1877ರಲ್ಲಿ ಮೈಸೂರು ಸಂಸ್ಥಾನವು ಭೀಕರ ಕ್ಷಾಮಕ್ಕೆ ತುತ್ತಾಯಿತು. ಮಳೆ, ಬೆಳೆಯಿಲ್ಲದೇ ಸಾವಿರಾರು ಜನರು ಹಸಿವಿನಿಂದಲೂ, ರೋಗರುಜಿನಾದಿಗಳಿಂದಲೂ ಸಾಯುತ್ತಾ ಹೋದರು. ಆಗಿನ ಮೈಸೂರು ಸರ್ಕಾರವು ಪರಿಹಾರ ಕಾರ್ಯ ಕೈಗೊಂಡರು. ರಾಜ್ಯದ ಬೊಕ್ಕಸ ಬರಿದಾಗಿ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತು. ಇಂಥ ಪರಿಸ್ಥಿತಿಯಲ್ಲಿ ಬರದ ನಾಡಾದ ಚಿತ್ರದುರ್ಗದ ಪರಿಸ್ಥಿತಿ ಹೇಳತೀರದು. ಆಗ ಹಸಿದು ಕಂಗಾಲಾದ ಜನರಿಗೆ ತಮ್ಮ ಶಕ್ತಿ ಮೀರಿ ಅನ್ನದಾನ ಮಾಡಿದರು. ಕಾಶಿ ಅಪ್ಪಣ್ಣಶೆಟ್ಟರು. ಚಿತ್ರದುರ್ಗದ ದೊಡ್ಡಪೇಟೆಯ ಉಚ್ಚಂಗಮ್ಮ ದೇವಸ್ಥಾನದ ಮುಂದೆ ಮೂರು ತಿಂಗಳ ಕಾಲ ಬಲಿ ನಡೆಸಿದ್ದರು.

 

 ಅಪ್ಪಣ್ಣಶೆಟ್ಟರು ಒಂದು ಪ್ರಬುದ್ಧ ಐತಿಹಾಸಿಕ ವೈಶ್ಯ ಮನೆತನಕ್ಕೆ ಸೇರಿದವರಾಗಿದ್ದರು. ಶಾಸನಗಳಲ್ಲಿ ತಿಳಿಯುವಂತೆ, ಪಾಳೆಯಗಾರರ ಕಾಲದಿಂದಲೂ ಪ್ರತಿಷ್ಠಿತವಾಗಿರುವ ಒಂದು ಮನೆತನ ಇವರದು. ಕ್ರಿ.ಶ. 1849ರಲ್ಲಿ ಚಿತ್ರದುರ್ಗಕ್ಕೆ ಸಮೀಪದಲ್ಲಿ ಕಾಶೀಪುರ ಎಂಬ ಹೊಸ ಊರೊಂದನ್ನು ಕಟ್ಟಿ, ಅಲ್ಲೊಂದು ದೇವಸ್ಥಾನವನ್ನು ನಿರ್ಮಿಸಿ, ಅದರಲ್ಲಿ ಚನ್ನಕೇಶವ ಕಾಶಿ ವಿಶ್ವೇಶ್ವರ ಮೊದಲಾದ ದೇವರನ್ನು ಪ್ರತಿಷ್ಠಾಪಿಸಿದ ಸುಬ್ಬಶೆಟ್ಟಿಯ ಮೂವರು ಮಕ್ಕಳಲ್ಲಿ ಹಿರಿಯವರೇ ಈ ಅಪ್ಪಣ್ಣಶೆಟ್ಟರು.

 

ಚಿತ್ರದುರ್ಗದಂತಹ ದೊಡ್ಡ ಊರಿಗೆ ಮೂರು ತಿಂಗಳು ಕಾಲ ಅಂಬಲಿದಾನ ಮಾಡಿರಬೇಕಾದರೆ ದೈವಪ್ರೇರಣೆಯೂ ಒಂದು ಕಾರಣ ಎಂದು ಇಲ್ಲಿಯವರ ನಂಬಿಕೆ. ಅಪ್ಪಣ್ಣಶೆಟ್ಟರು ಅಕ್ಷರಶಃಕರ್ಮಯೋಗಿ. ಬರಗಾಲದಲ್ಲಿ ನೊಂದು-ಬೆಂದ ಜನರಿಗೆ ಇವರು ಮನ ಮಿಡಿಯತೇ ಹೊರತು, ಇವರಿಗೆ ಯಾವುದೇ ರೀತಿಯ ಪ್ರತಿಫಲಾಪೇಕ್ಷ ಇರಲಿಲ್ಲ. ಆಗ ಹತ್ತನೇ ಚಾಮರಾಜ ಒಡೆಯರು ಶೆಟ್ಟರನ್ನು ತಮ್ಮಲ್ಲಿಗೆ ಕರೆಯಿಸಿಕೊಂಡು, ಕ್ರಿ.ಶ. 1881ರ ಮಾರ್ಚ್ 25ರಂದು ತಮ್ಮ ಪಟ್ಟಾಭಿಷೇಕದ ದಿನವೇ ಸನ್ಮಾನಿಸಿ, ಗೌರವ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದರು. ಆಗ ತಾನೇ ಸಿಂಹಾಸನವೇರಿದ್ಧ ತರುಣ ರಾಜ ಅಪ್ಪಣ್ಣಶೆಟ್ಟರ ತ್ಯಾಗ ಹಾಗೂ ದಾನ ಪ್ರವೃತ್ತಿಯನ್ನು ಮೆಚ್ಚಿ, ನಮ್ಮ ಪ್ರೀತಿಯ ಕೊಡುಗೆಯಾಗಿ ನಿಮಗೆ ಏನು ಕೊಡೋಣ, ಶೆಟ್ಟರೆ? ಎಂದು ರಾಜನು ಕೇಳಿದಾಗ ಬೇರೆನೂ ಬೇಡ, ನನ್ನೊಡೆಯ! ತಮ್ಮ ಸನ್ನಿಧಿಯಲ್ಲಿ ನಾನು ನಿಂತಿರುವ ಒಂದು ಭಾವಚಿತ್ರ ಮಾತ್ರ ಸಾಕು ಎಂದರಂತೆ. ಅದಕ್ಕೆ ಸಾಕ್ಷಿ ಅಪ್ಪಣ್ಣಶೆಟ್ಟರ ವಂಶಸ್ಥರಲ್ಲೊಬ್ಬರಾಗಿರುವ ಶ್ರೀ ಕಾಶಿ ಶ್ರೀನಿವಾಸಶೆಟ್ಟರ ಮನೆಯಲ್ಲಿ ಒಂದು ಗೌರವನೀಯ ಸ್ಮಾರಕವಾಗಿ ಸುರಕ್ಷಿತವಾಗಿದೆ.


(ಆಧಾರ: ನಿರಂತರ ಬಿ.ರಾಜಶೇಖರಪ್ಪ)

.....

© 2011 www.chitharadurga.com. Best fit for 1024 X 768 Resolution.