ಶಾತವಾಹನರು
ಶಾತವಾಹನರು ಕರ್ನಾಟಕವನ್ನು ಆಳಿದ ಮೊದಲ ಸಾಮ್ರಾಜ್ಯವಾಗಿದೆ. ಆರಂಭದಲ್ಲಿ ಅವರು ಮೌರ್ಯರ ಸಾಮಂತರಾಗಿದ್ದು, ಮೌರ್ಯರ ಪತನದ ನಂತರ ಸ್ವತಂತ್ರರಾಗಿ ಶಾತವಾಹನ ವಂಶವನ್ನು ಸ್ಥಾಪಿಸಿದನು. “ಪೈಥಾನ್” ಅವರ ರಾಜಧಾನಿಯಾಗಿದ್ದು, ಅವರು ಸುಮಾರು 460 ವರ್ಷಗಳ ಕಾಲ ಕರ್ನಾಟಕವನ್ನು ಆಳಿದರು. ಅವರ ಸಾಮ್ರಾಜ್ಯವು ದಕ್ಷಿಣ ಭಾರತವಲ್ಲದೇ ಉತ್ತರ ಭಾರತಕ್ಕೂ ವ್ಯಾಪಿಸಿತ್ತು. ಕರ್ನಾಟಕದ ಬಹುಭಾಗಗಳನ್ನು ಅವರು ಆಳಿದರು. ಗೌತಮಿಪುತ್ರ ಶಾತಕರ್ಣಿ, ಪುಲಮಾಯಿ, ಯಜ್ಞಶ್ರೀ, ಶಾತಕರ್ಣಿ ಈ ವಂಶದ ಮುಖ್ಯ ದೊರೆಗಳು. ಅವರು ವೈದಿಕ ಧರ್ಮದ ಪೋಷಕರು, ದಕ್ಷ ಆಡಳಿತಗಾರರು, ಕಲೆ, ಸಾಹಿತ್ಯ, ಧರ್ಮಗಳ ಪೋಷಕರಾಗಿ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ಮೊದಲಿಗೆ ಸಾಂಸ್ಕೃತಿಕ ಐಕ್ಯತೆಯನ್ನು ತಂದು ಬೃಹತ್ ಭಾರತಕ್ಕೆ ತಳಹದಿ ಹಾಕಿದರು. ಅವರ ಆಶ್ರಯದಲ್ಲಿ ಬೌದ್ಧಧರ್ಮ ಮತ್ತು ಪ್ರಾಕೃತ ಭಾಷೆಗಳು ವಿಫುಲವಾಗಿ ಬೆಳೆದವು. ಕ್ರಿ.ಶ. 78ರಲ್ಲಿ ಶಾಲಿವಾಹನ ಶಕೆಯನ್ನು ಆರಂಭಿಸಿದರು.
ಸ್ಥಾಪಕರು |
ಸಿಮುಖ |
ವರ್ಷ |
ಕ್ರಿ.ಪೂ. 235 |
ರಾಜಧಾನಿ |
ಪೈಥಾನ್ |
ಪ್ರಮುಖ ರಾಜ |
ಗೌತಮಿಪುತ್ರ ಶಾತಕರ್ಣಿ |
ನಾಣ್ಯಗಳು |
ದಿನಾರ, ಸುವರ್ಣ(ಚಿನ್ನದ ನಾಣ್ಯಗಳು) ಮತ್ತು ಕುಷಣ(ಬೆಳ್ಳಿ) |
ಧರ್ಮಗಳು |
ಬೌದ್ಧಧರ್ಮಕ್ಕೆ ವಿಪುಲ ಆಶ್ರಯ, ಪುರಸ್ಕಾರ ನೀಡಿ, ಶೈವ, ವೈದಿಕ ಮತ್ತು ಜೈನ ಪಂಥಗಳನ್ನೂ ಸಹ ಪೋಷಿಸಿ “ಚತುತ್ಸಮಯಸಮುದ್ಧರಣ” ಎಂಬ ಕೀರ್ತಿಗೆ ಪಾತ್ರರಾದರು. |
ಆರ್ಥಿಕ ಸ್ಥಿತಿ |
ಯುರೋಪ್ ಮತ್ತು ರೋಮ್ ನೊಂದಿಗೆ ವ್ಯಾಪಾರ ಸಂಭಂಧ ಹೊಂದಿದ್ದರೆಂದು ಚಂದ್ರವಳ್ಳಿಯಲ್ಲಿ ದೊರೆತ ರೋಮ್ ನ ನಾಣ್ಯಗಳು ಹೇಳುತ್ತವೆ. |
ಭಾಷೆ |
ಪ್ರಾಕೃತ ಮತ್ತು ಸಂಸ್ಕೃತ ಶಾತವಾಹನರ ಪೋಷಣೆಯಲ್ಲಿದ್ದವು. ಪ್ರಾಕೃತ ಭಾಷೆ ಅವರ ರಾಜ್ಯಭಾಷೆಯಾಗಿತ್ತು. |
ಕೊನೆಯದೊರೆ |
ಪುಲಮಾಯಿ-2 (ಕ್ರಿ.ಶ. 215) |
ಶಾತವಾಹನರ ಮೂಲ:
ಪ್ರೋ||ರಾಪ್ಸನ್, ವಿ.ಎ.ಸ್ಮಿತ್ & ಆರ್.ಜಿ.ಭಂಡಾರ್ಕರ್ ಅವರ ಪ್ರಕಾರ ಶಾತವಾಹನರ ಮೂಲ ನೆಲೆ ಶ್ರೀಕಾಕುಳಂ, ಕೃಷ್ಣ, ಗುಂಟೂರು, ಧ್ಯಾನಕಾಟರ್, ಪೈಥಾನ್ ಆಗಿದ್ದವು. ನಾಣ್ಯಗಳು ಮತ್ತು ಅಶೋಕನ ಶಾಸನಗಳು ಅವರನ್ನು ಆಂಧ್ರದವರು ಕರೆದಿದೆ. ಪ್ಲೀನಿ ಸಹ ಅವರದು ‘ತೆಲುಗುನಾಡು’ ಎಂದಿದ್ದಾನೆ. ಅವರು ಆಂಧ್ರದವರು ಎಂದು ಒಪ್ಪಿಕೊಂಡ ಆರ್.ಜಿ.ಭಂಡಾರ್ಕರ್ ನಾಸಿಕ್ ಅವರ ಮೂಲ ನೆಲೆಯೆಂದು ತಿಳಿಸಿದ್ದಾರೆ.
ಹಿರೇಹಡಗಲಿಯಲ್ಲಿ ದೊರೆತಿರುವ ಶಾಸನವು ಶಾತವಾಹನರು ಕನ್ನಡಿಗರೆಂದು, ಅವರದು “ಶಾಂತನೀಹಾರ” ಎಂಬ ಮೂಲನೆಲೆಯಾಗಿತ್ತು ಎಂದಿದೆ. ರಾಜಶೇಖರನು “ಕಾವ್ಯಮೀಮಾಂಸೆ”ದಲ್ಲಿ ಕುಂತಳವನ್ನಾಳಿದ ರಾಜರನ್ನು ಶಾತವಾಹನರೆಂದು ಕರೆದಿದ್ದಾನೆ. ಒಟ್ಟಾರೆ ಶಾತವಾಹನರ ಮೂಲದ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಎಲ್ಲರೂ ಒಪ್ಪಬಹುದಾದೆಂದರೆ ಅವರು “ಆಂಧ್ರದವರು”.
ಶಾತವಾಹನರ ಕಾಲದಲ್ಲಿ ಚಂದ್ರವಳ್ಳಿ:
ಚಿತ್ರದುರ್ಗ ಬೆಟ್ಟದ ಪಶ್ಚಿಮದ ತಪ್ಪಲಿನಲ್ಲಿ ಚಂದ್ರವಳ್ಳಿ ಪ್ರಾಚೀನ ಪಟ್ಟಣಕ್ಕೆ ಹೊಂದಿಕೊಂಡಿರುವ ಹುಲಿಗೊಂದಿ, ಬಸವನಗೊಂದಿ, ಬಾರಲಗೊಂದಿ ಮತ್ತು ನೇರಲಗೊಂದಿ ಎಂಬ ನಾಲ್ಕು ಗೊಂದಿ(ಕಣಿವೆಗಳು)ಗಳಲ್ಲಿ ಶಾತವಾಹನ ಕಾಲೀನ ಜನರು ಇಲ್ಲಿ ನೆಮ್ಮದಿಯಿಂದ ಜೀವಿಸಿದ್ದುದ್ದಕ್ಕಾಗಿ ಹಲವಾರು ಪುರಾವೆಗಳು ಸಿಕ್ಕಿವೆ. ಶಾತವಾಹನರ ಕಾಲೀನ ಮಹತ್ತರ ನೆಲೆಗಳಲ್ಲಿ “ಚಂದ್ರವಳ್ಳಿ”ಯೂ ಒಂದು. ವಡಗಾಂವ್-ಮಾಧವಪುರ, ಬನವಾಸಿ, ಸನ್ನತಿಗಳಲ್ಲಿ ಇರುವಂತಹ ಇಟ್ಟಿಗೆಗಳ ಕಟ್ಟಡಗಳು, ಆಯತಾಕಾರದ ಕೋಣೆಗಳಿರುವ ಸಾರ್ವಜನಿಕ ಕಟ್ಟಡಗಳು, ಚೌಕಾಕೃತಿಯ ಕೋಣೆ, ಧೀರ್ಘಾಯುತ ಹಜಾರ, ವೃತ್ತಾಕಾರದ ಬಾವಿ, ಕಣಜಗಳಿರುವ ವಸತಿಗಳು, ಧೀರ್ಘವೂ ಅಗಲವೂ ಆಗಿರುವ ರಸ್ತೆಗಳು. ಶಾತವಾಹನರ ಕಾಲದಲ್ಲಿ ಚಂದ್ರವಳ್ಳಿಯೂ ಒಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತೆಂದು ಸಾಬೀತುಪಡಿಸುತ್ತದೆ.
ಚಂದ್ರವಳ್ಳಿಯ ಸ್ಥಳೀಯ ಸರ್ಕಾರದ ಆಡಳಿತ ಕೇಂದ್ರವಾಗಿದ್ದು, ಚೀನಾ ಮತ್ತು ರೋಮ್ ದೇಶಗಳೊಂದಿಗೆ ಸಂಪರ್ಕ ಹೊಂದಿದ್ದ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿದ್ದಿತು. ಕ್ರಿ.ಶ. 300ರವರೆಗೆ ಅಸ್ತಿತ್ವದಲ್ಲಿದ್ದು ಬೆಳವಣಿಗೆ ಕಂಡದ್ದನ್ನು ಇಲ್ಲಿಯ ಮಯೂರಶರ್ಮನ ಶಾಸನ ಧೃಡಪಡಿಸುತ್ತದೆ. ಚಂದ್ರವಳ್ಳಿಯು ಕೊಂಚ ಮಟ್ಟಿಗೆ ಶಾತವಾಹನರ ರಾಜಧಾನಿ “ಪೈಥಾನ್”ನ್ನು ಹೋಲುತ್ತದೆ. ರೋಮ್ ಚಕ್ರಾಪಧಿತ್ಯದ ಚಿನ್ನ-ಬೆಳ್ಳಿ ನಾಣ್ಯಗಳು ದೊರೆತಿರುವ ಸ್ಥಳಗಳಲ್ಲಿ ಚಂದ್ರವಳ್ಳಿಯೂ ಒಂದು.
(ಆಧಾರ: “ಮೌರ್ಯ ಮತ್ತು ಶಾತವಾಹನರ ಯುಗ”–ಪ್ರೊ. ಲಕ್ಷ್ಮಣ ತೆಲಗಾವಿ)
|