ಬನವಾಸಿ ಕದಂಬರು
ಕರ್ನಾಟಕದಲ್ಲಿ ಮೊದಲು ಹುಟ್ಟಿದ ಕನ್ನಡ ಸಾಮ್ರಾಜ್ಯವೇ ಬನವಾಸಿ ಕದಂಬರು. ಕದಂಬ ವಂಶವು ಕ್ರಿ.ಶ. 345ರಲ್ಲಿ ಮಯೂರಶರ್ಮನಿಂದ ಸ್ಥಾಪಿತವಾಯಿತು. ಇವನು ಶಿವಮೊಗ್ಗ ಜಿಲ್ಲೆಯ ತಾಳಗುಂದ ಅಗ್ರಹಾರದ ಬ್ರಾಹ್ಮಣ ವಿದ್ಯಾರ್ಥಿ. ಅವನು ತನ್ನ ಉನ್ನತ ವಿದ್ಯಾಭ್ಯಾಸಕ್ಕಾಗಿ ತನ್ನ ತಾತನ ಜೊತೆ ಕಂಚಿಯ ಘಟಿಕ ಸ್ಥಾನಕ್ಕೆ ಹೋಗಿದ್ದು, ಪಲ್ಲವ ರಾಜಧಾನಿಯಲ್ಲಿ ಯಾವುದೋ ಅವಮಾನಕ್ಕೆ ಗುರಿಯಾದ ಈ ಬ್ರಾಹ್ಮಣ ಯುವಕ ತನ್ನ ಬ್ರಾಹ್ಮಣ ಧರ್ಮವನ್ನು ತ್ಯಜಿಸಿ ಕ್ಷತ್ರಿಯನಾಗಿ ಪಲ್ಲವರ ವಿರುದ್ಧ ದಂಗೆ ಎದ್ದನು. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಪಟ್ಟ ಕಟ್ಟಿಕೊಂಡ ಅವನನ್ನು ಪಲ್ಲವರು, ಚಕ್ರವರ್ತಿ ಎಂದು ಬಲವಂತವಾಗಿ ಒಪ್ಪಿಕೊಳ್ಳಲೇಬೇಕಾಯಿತು.
ಕಾಕುಸ್ತವರ್ಮನು ಕದಂಬ ವಂಶದಲ್ಲಿ ಬಲಿಷ್ಟ ಅರಸನಾದನು. ಆರಂಭದಲ್ಲಿ ಶಾತವಾಹನರೊಂದಿಗೆ ಸಂಭಂಧ ಹೊಂದಿದ್ದ ಕದಂಬರು, ಅವರ ಅವನತಿಯ ನಂತರ ಪಶ್ಚಿಮ ಭಾಗಗಳನ್ನು ಆಕ್ರಮಿಸಿ ಸ್ವತಂತ್ರರಾದರು. ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಅವರ ರಾಜಧಾನಿಯಾದ್ದರಿಂದ ಅವರು “ಬನವಾಸಿಯ ಕದಂಬ”ರೆಂದು ಹೆಸರಾದರು. ಕದಂಬರು ಸಿಂಹ ಲಾಂಛನ ಮತ್ತು ವಾನರ ಧ್ವಜ ಹೊಂದಿದ್ದರು. ಹಲ್ಮಿಡಿಯಲ್ಲಿ ದೊರೆತಿರುವ ಕನ್ನಡದ ಮೊದಲ ಶಾಸನವು ಕದಂಬರದೇ ಆಗಿದೆ. ಕದಂಬರು ಸುಂದರ ದೇವಾಲಯಗಳನ್ನು, ಬಸದಿಗಳನ್ನು ನಿರ್ಮಿಸಿದರು ಮತ್ತು ದೇವಾಲಯಗಳ ಮೇಲಿನ ನಾಗರ ಶಿಖರವು ಇವರ ಕೊಡುಗೆಯಾಗಿದೆ.
(ಆಧಾರ: “ಮೌರ್ಯ ಮತ್ತು ಶಾತವಾಹನರ ಯುಗ”– ಲಕ್ಷ್ಮಣ ತೆಲಗಾವಿ) |