ಹಿರಿಯೂರು ತಾಲ್ಲೂಕಿನ ಜಾನಪದ ನೆಲೆಗಳು
ವೇಣುಕಲ್ಲುಗುಡ್ಡ: ಕಾಡುಗೊಲ್ಲರ ಎತ್ತಪ್ಪನ ನೆಲೆ:
ಕಾಡುಗೊಲ್ಲರ ಅತ್ಯಂತ್ಯ ಹಿರಿಯ ಸಾಂಸ್ಕೃತಿಕ ವೀರನಾದ ಎತ್ತಪ್ಪನ ನೆಲೆಯೊಂದು ಹಿರಿಯೂರಿನಿಂದ 25 ಕಿ.ಮೀ. ದೂರವಿರುವ ವೇಣುಕಲ್ಲು ಗುಡ್ಡದಲ್ಲಿದೆ. ಇಲ್ಲಿ ಎತ್ತಪ್ಪ ಬಳಸುತ್ತಿದ್ದನೆಂದು ಹೇಳಲಾದ ಮಂಚವನ್ನು, ಮರಬಿಲ್ಲನ್ನು ಪೂಜಿಸುತ್ತಾರೆ. ಇದು ಕಲ್ಲು, ಮಣ್ಣು, ಮರವನ್ನು ದೇವರೆಂದು ಪೂಜಿಸುವ ಜನಪದರ ಸಂಸ್ಕೃತಿಗೆ ಸಹಜವಾದುದೇ ಆಗಿದೆ. ಪಶುಪಾಲಕ ವೃತ್ತಿಯಲ್ಲೇ ಸ್ವರ್ಗವನ್ನು ಕಂಡ ಎತ್ತಪ್ಪನ ಸಮಾಧಿ ಚಳ್ಳಕೆರೆ ತಾಲ್ಲೂಕಿನ ತಳುಕಿನ ಸಮೀಪದ ಗುಡ್ಡದಲ್ಲಿದೆ. ಇಲ್ಲಿಗೆ ಕುರಿಗಾಹಿಗಳು, ಪಶುಪಾಲಕರು ಪ್ರತಿವರ್ಷ ಒಂದು “ಹಾಲು ಮೀಸಲ”ನ್ನು ತಂದು, ಎತ್ತಪ್ಪನ ಸಮಾಧಿಗೆ ಅಭಿಷೇಕ ಮಾಡುವ ಸಂಪ್ರದಾಯ ವಿಶೇಷವಾಗಿದ್ದು, ಇದು “ಕಾಡುಗೊಲ್ಲರ ಕಾಶಿ” ಎನಿಸಿದೆ.
ಕರಿಯೋಬೇನಹಳ್ಳಿ:
ಕಾಡುಗೊಲ್ಲರಲ್ಲಿ “ತಾಳಿಕಟ್ಟದ ಗೊಲ್ಲರು” ಎಂಬ ಒಳಪಂಗಡದ ಹುಟ್ಟಿಗೆ ಕಾರಣಳಾದ ಬ್ಯಾಡರ ಹರ್ತೀಕೋಟೆ ಕರಿಯೋಬಜ್ಜಿ ಗುಡ್ಡೆ ಹಿರಿಯೂರಿನಿಂದ ಸುಮಾರು 8 ಕಿ.ಮೀ. ದೂರವಿರುವ ಕರಿಯೊಬೇನಹಳ್ಳಿಯಲ್ಲಿ ಇದೆ. ಇದು ಸಂಪೂರ್ಣ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದು, ಇದನ್ನು ವ್ಯವಸ್ಥಿತ ರೀತಿಯಲ್ಲಿ ಸಂರಕ್ಷಿಸಬೇಕಾಗಿದೆ.
ಕೂಡ್ಲಹಳ್ಳಿ: ಪಾತಲಿಂಗನ ನೆಲೆ:
ಹಿರಿಯೂರು ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ. ದೂರದ ಕೂಡ್ಲಹಳ್ಳಿಯಲ್ಲಿ ಪಾತೇಲಿಂಗನ ನೆಲೆ ಇದೆ. ಈ ದೇವರು ಬಹಳ ಉಗ್ರಸ್ವರೂಪದ್ದೆಂದು ಈ ದೇವಸ್ಥಾನದ ಅರ್ಧಬಾಗಿಲನ್ನು ಮಾತ್ರ ತೆರೆದಿರುತ್ತಾರೆ. ಹೀಗಾಗಿ ಛಾಯಾಗ್ರಹಣಕ್ಕೂ ಇಲ್ಲಿ ನಿಷೇಧವಿದೆ.
ಈ ದೇವರು ಮೇಲ್ಜಾತಿಯಾದ ಲಿಂಗಾಯಿತರನ್ನು ಕಾಡುಗೊಲ್ಲರಾಗಿ ಪರಿವರ್ತಿಸಿ “ಶೀಲವಾಡಿ ಗೊಲ್ಲರು” ಎಂಬ ಒಳಪಂಗಡದ ಸೃಷ್ಟಿಗೆ ಕಾರಣವಾದ ಕತೆ ಸ್ವಾರಸ್ಯಕರವಾಗಿದೆ. ಇದೇ ತಾಲ್ಲೂಕು ಕೇಂದ್ರ ಸುಮಾರು 20 ಕಿ.ಮೀ. ದೂರದಲ್ಲಿ ಕಾಟಲಿಂಗನ ಮೂಲನೆಲೆ ಇದೆ. ಈ ಗುಡಿಯಲ್ಲಿ ಆಳೆತ್ತರದ ಬೆಳ್ಳಿ ಹೊದಿಕೆಯ ಗಣೆಗಳಿದ್ದು, ಇವನ್ನು ನುಡಿಸುತ್ತಾ “ಹೇಳಿಕೆ” ನೀಡುವ ರೀತಿ ರೋಮಾಂಚನಕಾರಿಯಾಗಿದೆ.
ನಂದಿಹಳ್ಳಿ:
ಹಿರಿಯೂರು ತಾಲ್ಲೂಕು ಕೇಂದ್ರದಿಂದ 15 ಕಿ.ಮೀ. ದೂರದ ನಂದಿಹಳ್ಳಿಯಲ್ಲಿ ಕಾಡುಗೊಲ್ಲರಿಗೆ ಸೇರಿದ ರಂಗನಾಥಸ್ವಾಮಿ ದೇವಾಲಯವಿದ್ದು, ದೇವಸ್ಥಾನದ ಮುಂಭಾಗದಲ್ಲಿರುವ ಸುಮಾರು 20 ಅಡಿಗೂ ಹೆಚ್ಚು ಎತ್ತರದ ಅತ್ಯಾಕರ್ಷಕವಾದ ಹನುಮಂತ, ಗರುಡರ ಕೆತ್ತನೆಗಳು ಗಮನ ಸೆಳೆಯುತ್ತದೆ. ಬುಡಕಟ್ಟು ಜನಕ್ಕೆ ಸೇರಿದ ಇಂತಹ ಭವ್ಯ ಶಿಲ್ಪವೊಂದರ ಇರುವು ಬಹಳ ಜನಕ್ಕೆ ಗೊತ್ತೇ ಇಲ್ಲ!
|